ಗುರುವಾರ, ಮೇ 7, 2015

ಮರೆ

ಹೃದಯದಿಂದ ಹಾರಿದ ಚಿಟ್ಟೆಯೊಂದು
ಮಾಮರದ ಮೇಲೆ ಕುಳಿತು..
ಗೇಲಿ ಮಾಡಿ ನಗುತಿದೆ
ಬಾ ಎಂದು ಕೈಬೀಸಿ ಕರೆಯುತಿದೆ..
ಮುತ್ತಂತೆ ಸಾಕಿದ್ದೆ ನಾನಿನ್ನ...
ನೀ ಹಾರಿದೆ ಮುಳ್ಳಂತೆ ಚುಚ್ಚಿ ನನ್ನ..
ಸಿಹಿ ಅಲ್ಲವಿದು ಕಹಿಯಾದ ನೋವು..
ಕೇಳಿದೆಲ್ಲಾ ಕೊಟ್ಟೆ ನೀ ಬಯಸದಿರೆ...
ಹೋದೆ ನೀ ಹೇಳದೆ ಕಾರಣ.
ನಿನ್ನ ಮಾತು ನನಗೆ ಸಾವಿರ ಮುತ್ತು..
ಕೊಟ್ಟೆ ನಿನಗೆ ಎರಡು ರೆಕ್ಕೆ ಹೆಚ್ಚು..
ಹಾರಿ ಹೋಗೋ ಮುನ್ನ ನೆನೆಸಿಕೊಂಡೆಯಾ ಒಮ್ಮೆ!??
ಕಿಂಚಿತ್ತು ಬಾರದೆ ನನ್ನಿರವು..!
ಬಣ್ಣ ಬಣ್ಣದ ಲೋಕದ ಬುದ್ದಿ ನಿನಗೇಕೆ ಬಂತು?
ಅರ್ಥವಿಲ್ಲದ ಕಾರಣಕ್ಕೆ ತಾತ್ಪರ್ಯವಿದೆಯೇ?
ಹೇಳದಿದ್ದರೇನು ನಿನ್ನತನವ ನೀ ತೋರಿದೆ..
ನಾ ಮೆಚ್ಚಿದೆ ಲೋಕದಂತರಂಗದ ಅಂಕುಡೊಂಕಾ...!
ನಾ ಸಾಗುವೆ ಮರೆತು ನಿನ್ನ ನನ್ನೆದುರ ಹಾದಿಯಲಿ,
ಇನ್ನೆಂದು ಕಾಣಿಸದಿರು ಮತ್ತೆ ಚುಚ್ಚಲು.!!!

- ನಾಗಭೂಷಣ ಗುಮಗೋಡು.

ಸೋಮವಾರ, ಜನವರಿ 5, 2015

ಸ್ವಾಭಿಮಾನಿ

ಕಂಡಿತೊಂದು ಕನಸು
ಹಿಂದಿಲ್ಲದ ಮುಂದಿಲ್ಲದ
ಗೊತ್ತು ಗುರಿಯಿಲ್ಲದ 
ಕೆಲಸಕ್ಕೆ ಬಾರದ್ದು

ಅಲ್ಲೊಬ್ಬ ಹುಡುಗ 
ಕುಣಿಯುವಷ್ಟು ಕುಣಿದ 
ಕಲ್ಲುಮಣ್ಣು ಕೂಡಿದ ನೆಲದಲ್ಲಿ
ರಕ್ತ ಸುರಿಸಿದ

ಹೇಳಿ ಕೇಳಿ ನೆರೆಮನೆಯವ
ಸುಮ್ಮನೆ ರೇಗುವುದೆ?
ಕಿತ್ತ ಬೇಲಿಗೂಟ ನೆಟ್ಟ
ನಮ್ಮ ಮನೆಯ ಅಂಗಳದೊಳಗೆ

ಇತ್ತ ಇದ್ದನೊಬ್ಬ ಸ್ವಾಭಿಮಾನಿ
ಕೇಳಲೋದ ಅವನ ಮನೆಗೆ
ಅಂದನವ ಅದೆನ್ನ ಮನೆ
ಹೋಗು ನೀ ಆಚೆಗೆ

ಕೊಟ್ಟೆ ಕೊಟ್ಟೆ ಎಲ್ಲಾ ಕೊಟ್ಟೆ
ಅಂದೆ ನಿನಗೆ ಎಲ್ಲವ
ಅಂದನಿವ ಮೆಲ್ಲಗೆ
ಕತ್ತಿ ಹಿಡಿದು ನಿಂತನವ ಬೆನ್ನ ಹಿಂದಕೆ

ಕೊನೆಯಾಯಿತಲ್ಲಿಗೆ ಕನಸೊಂದು
ಶುರುವಾಯಿತು ಸಂಕ್ರಮಣದ ಸಮರ
ನ್ಯಾಯ ನಮ್ಮದಲ್ಲವೇನು
ಮುನ್ನಡೆಯಲೇಕೆ ಅಂಜಿಕೆ??

ಪಾಪಿಲೋಕ ಅಲ್ಲಿಹುದು
ಉಗ್ರರೂಪ ತಾಳುತಿಹುದು
ಕಂತ್ರಿ ಕೆಲಸ ಮಾಡುತಿಹುದು
ನಾವು ನರಸಿಂಹರು ಎಚ್ಚರ

ನ್ಯಾಯ ನೀತಿ ಮೆರೆದ ನಾಡಿದು
ಕೈ ಮುಗಿದು ಮೆಟ್ಟು ಈ ಭವ್ಯ ಭೂಮಿಯ
ಕೆಣಕಿದರೆ ಬಿಡೆವು ತಕ್ಕಶಾಸ್ತಿಯ ಮಾಡುವೆವು
ನೆನಪಿರಲಿ ಇದು ನಿಮ್ಮ ಮನದೊಳಗೆ...



--- ನಾಗಭೂಷಣ ಗುಮಗೋಡು.

http://www.facebook.com/kadalatheera

ಗುರುವಾರ, ಫೆಬ್ರವರಿ 20, 2014

ನಿನ್ನ ಪ್ರೀತಿಯ ಪರಿಯ ನಾನರಿಯೆ,
ನಿನ್ನ ನಯನಗಳ ಮೂಕವೇದನೆ ನಾನೆಂತು ಬಲ್ಲೆನು??
ಪ್ರಿಯ ಗೆಳತಿ ನಿನ್ನೊಲುಮೆಯ
ಕಾವು ತಟ್ಟೀತೇ ಎನಗೆ??
ಕಣ್ಣ ರೆಪ್ಪೆಗಳಂಚಲ್ಲಿ ಮೂಡಿಬಂದ
ಕಂಬನಿ ನಲಿವಿಗೋ,ನೋವಿಗೋ?
ನಿನ್ನ ನಾ ಮೆಚ್ಚಲೇನು ??
ನೀ ಮೆಚ್ಚುವ ಮುನ್ನ...
ನಿನ್ನೆದೆಯ ನಂದಾದೀಪದ ಹಣತೆ
ನಾನಾಗುವೆ ನೀ ದೀಪವಾಗುವ ಮುನ್ನ,,
ನೀನಾಡೋ ಸುಳ್ಳು ಎನಗೊಂದು ವೇದವಾಕ್ಯ.
ನೀ ನನ್ನ ಪ್ರೇಮಪುಸ್ತಕ 
ನಾನೊಬ್ಬ ಲೇಖನಿ
ಬರೆಯಲೇನು ನಾ ಅಂತರಾಳದ ಭಾವವ...


-ನಾಗಭೂಷಣ ಗುಮಗೋಡು.

ಗುರುವಾರ, ಫೆಬ್ರವರಿ 21, 2013

ಮನಸೇ ಸಮಾಧಾನ

ತೆರೆದಿಟ್ಟ ಮನವೇ ಕೇಳು..
ನಲ್ಮೆಯ ಒಲವೇ ಕೇಳು..
ನಿನ್ನಯ ಮೌನವ ಮುರಿಯುವೆ ನಾ..
ನಿನ್ನ ತುಟಿಯಂಚಲಿ ತರಿಸುವೆ ನಾ ನಗುವ..

 
ಒಲವಿನ ಜೀವವೇ ಏನಾಯ್ತು..?
ತೆರೆಸಿಕೋ ನಿನ್ನ ಒಳ ಗಣ್ಣ..
ತೆರೆದು ನೋಡು ಕಾಣುವುದು ನಿನಗೆ ಜಗಬಣ್ಣ..
ನೀ ನುಡಿವ ಮಧುರ ಪಿಸುಮಾತಿಗೂ ಗೊತ್ತು ನಿನ್ನ ನೋವು.



ಚಲಿಸುವೆ ಏನೆಂದು?ನುಡಿಸುವೆ ಏನೆಂದು?
ನೀ ನುಡಿದರೇನು?ನುಡಿಯದಿದ್ದರೇನು?
ನಾ ಬಲ್ಲೆ ನಿನ್ನ ಅಂತರಾಳದ ಧ್ವನಿಯ..
ಎಲ್ಲೆಲ್ಲೂ ನಗುವೆ ನೀ ಅದರ ಹಿಂದಿಹುದು ದುಃಖದ ಭೋರ್ಗರೆತ.

 
ಯಾರಿಗೆ ಯಾರುಂಟು ಯಾರು ಬಲ್ಲವರು?
ತಮ್ಮ ಜಾಡಿಗೆ,ಜಿದ್ದಾಜಿದ್ದಿಗೆ ಹೆಗಲು ಕೊಡುವವರಾರು?
ಕಣ್ಣು ಹಾಯಿಸಿದಷ್ಟು ದೂರ ಕತ್ತಲೆ,ಕಾಣದು ದಾರಿ ಶೂನ್ಯ..
ಅರ್ಥವಿಲ್ಲದ ಯೋಚನೆಗೆ ಲಗಾಮು ಹಾಕಬಾರದೇಕೆ?


ಅರಿವೆ ಇಲ್ಲದಿಹುದು ಬಾಹ್ಯಲೋಕಕೋ??
ಅಂತರಂಗದ ಭಾವನೆಗೆ ದಿಕ್ಸೂಚಿಯ ಕೊರತೆಯೇ?
ಅದ್ಯಾವುದೋ ಮೂಲೆ ಹೇಳುವರಿಲ್ಲ,,ಕೇಳುವರಿಲ್ಲ.
ದಿಕ್ಕು ತಪ್ಪಿದ ಕುದುರೆಯಂತೆ ಮನಸಿನ ನಾಗಾಲೋಟ...

 
ನೋಡಲದುವೆ ಕಾರ್ಮೋಢ,ಅಂಚಲೊಂದು ಬೆಳ್ಳಿರೇಖೆ..
ನೋಡಲದು ಚಂದ ಅಂದ,ನಿನ್ಯಾಕೆ ಆಗಲೊಲ್ಲೆ ಅದರಂತೆ?
ಬಯಸಿದಷ್ಟು ಕೊಡುವೆ ನನ್ನ ಪ್ರೀತಿಯ,ವಾತ್ಸಲ್ಯದ ಬಲವ..
ಓ ನನ್ನ ಮನವೇ ನಿನ್ನ ಜೊತೆ ನಾನೆಂದು...ಮನಸೇ ಸಮಾಧಾನ..






-ನಾಗಭೂಷಣ ಗುಮಗೋಡು.

ಭಾನುವಾರ, ಡಿಸೆಂಬರ್ 30, 2012

ಪ್ರೇಮದೀಪ

ಸುಮ್ಮನೆ ಚುಚ್ಚುತಿಹಳು..
ನನ್ನ ಮುದ್ದಿನ ಹುಡುಗಿ..
ನನ್ನೆದೆಯ ಪ್ರೀತಿ ಗೂಡ....
ತೋರು ನಿನ್ನೊಲುಮೆಯ ಗೆಳತಿಯನೆಂದು..





ಅವಳೇ ನನ್ನವಳು..ಹೇಗೆ ಹೇಳುವೆನು..??
ಅವಳಿಗೂ ಗೊತ್ತು..ನಾನೇ ತನ್ನವಳೆಂದು.
ಸುಮ್ಮನೆ ಕಾಡುತಿಹಳು ದಿಕ್ಕೆಡುವಂತೆ..
ನಾನೇ ಉಲಿಯಲಿ ಪ್ರೀತಿಮಾತನೆಂದು..



ಅವಳ ಮಾತು ನನಗೆ ಮುತ್ತು.
ಅವಳ ಕಣ್ಣುಗಳ ಪ್ರಖರ ನನ್ನ ಪ್ರೇಮ ಕಾಂತಿ.
ಅವಳ ನಗು ನನ್ನ ಪ್ರೇಮದ ನಗಾರಿ..
ಆದರೂ ತರಿಸುವಳು ಒಮ್ಮೊಮ್ಮೆ ಹುಸಿಮುನಿಸ.



ಅವಳ ಕಂಬನಿ ನನಗೆ ಧರ್ಮಸಂಕಟ,,
ಹೇಗೆ ಹೇಳಲಿ ನನ್ನ ಮನದ ತುಮುಲ.
ಅವಳ ಮುಗ್ದ ಮಾತು ನನಗೆ ಪ್ರೇಮಚರಿತೆ..
ಅವಳು ನನ್ನ ಕಾವ್ಯದೀಪ ಪ್ರೇಮದೀಪ..



ಅವಳ ಮನಸು ಒಂದು ಬಣ್ಣ ಬಣ್ಣದ ಚಿತ್ತಾರ,
ಕಲೆಗಾರ ನಾನು..ಬಿಡಿಸಿದೆ ಅವಳ ಮನಸಲ್ಲಿ ಕನಸಿನ ವಿನ್ಯಾಸ.
ಕೋಪದ ತುದಿಯಲ್ಲಿ ಪ್ರೀತಿಯ ಬಯಕೆ ನನ್ನಾಕೆಗೆ..
ಅವಳ ತಿಳಿನೀರ ಮನಸಲಿ ಹರಿಯುವ ಮೀನು ನಾನು.




- ನಾಗಭೂಷಣ ಗುಮಗೋಡು.

ಗುರುವಾರ, ಡಿಸೆಂಬರ್ 20, 2012

"ಛಲವೊಂದಿದ್ದರೆ ಮಾರ್ಗ"


"ಮಾಡಿದ್ದುಣ್ಣೋ ಮಹರಾಯ" ಎಂಬ ನಾಣ್ಣುಡಿಯನ್ನು ಎಲ್ಲರೂ ಕೇಳಿರುತ್ತಾರೆ.ಅಂದರೆ ನಾವು ಏನು ಮಾಡಿರುತ್ತೇವೆಯೋ ಅದಕ್ಕೆ ತಕ್ಕ ಪ್ರತಿಫಲ ಎಂಬರ್ಥ.ದುಡಿದು ಕೆಲಸ ಮಾಡು,ಬಗ್ಗಿ ಕೆಲಸಮಾಡು,ಜವಾಬ್ದಾರಿ ಹೊತ್ತು ಕೆಲಸ ಮಾಡು ಎಂದು ಜನ ಆಡುತ್ತಾರೆ.ಅದಕ್ಕೆ ತಕ್ಕಂತೆ ಸಂಬಳ,ಕೂಲಿ,ದೈನಂದಿನ ಅಗತ್ಯತೆಗೆ ಅನುಕೂಲಕರ ರೀತಿ ನಿರ್ಮಾಣವಾಗುವುದು ಸುಳ್ಳಲ್ಲ.ಆದರೆ ಈ ಕೆಲಸ ಮಾಡುವುದು ಹೇಗೆ?.ಒಂದು ಅಡಿಗೆ ಸಿದ್ದಪಡಿಸುವಾಗ ಮುಖ್ಯವಾಗಿ ಕಟ್ಟಿಗೆ,ಒಲೆ,ಉರಿ,ಪಾತ್ರೆ,ಅಡುಗೆಗೆ ಬೇಕಾದ ಸಾಮಾಗ್ರಿಗಳು ಅಗತ್ಯ.ನಂತರ ಅದನ್ನು ನಮಗೆ ಬೇಕಾದ ರೀತಿ ಅಡುಗೆ ಸಿದ್ದಪಡಿಸಿ ಸಂತ್ರಪ್ತಿಯಾಗಿ ಉಣ್ಣಬೇಕು.ಆಗಲೇ ಮನಸ್ಸಿಗೊಂದು ರೀತಿ ಸಂತಸ,ನೆಮ್ಮದಿ.

 

ಹಾಗೆಯೇ ಮಾನವನ ಜೀವಿತದ ಪ್ರತಿಯೊಂದು,ಘಳಿಗೆಯಲ್ಲೂ ಕಟ್ಟಿಗೆ,ಒಲೆ,ಪಾತ್ರೆ,ಉರಿ ಇರಲೇಬೇಕು.ಮಾನವನ ಜೀವನ ಒಂದು ಅಡುಗೆ ಪದಾರ್ಥದಂತೆ.ಅದು ಚೆನ್ನಾಗಿ ಬೆಂದಾಗಲೇ ಅಡುಗೆ ರುಚಿಯಿರುವುದು.ಅಂದರೆ ಜೀವನ ಸಾರ್ಥಕವಾಗುವುದು.ಏನು ಮಾಡಿದರೆ ಏನು ಸಿಗುವುದು? ಎಂಬ ನಿಚ್ಚಳ ಹುಡುಕಾಟದ ಬದುಕೇ ಸಾಧನೆಯತ್ತ ಅನವರತ ಪಯಣ.

 

ಸಾಧನೆಯ ಹಾದಿ ತುಳಿಯುವಾಗ,ಮೊದಲು ಕಷ್ಟ ಮತ್ತು ನೋವುಗಳೆಂಬ ಕಲ್ಲು ಮುಳ್ಳುಗಳ ಮೇಲೆ ನಡೆಯಬೇಕು.ಜೀವನ ಚಕ್ರದ ಗಾಲಿ ಮೊದಮೊದಲು ಕಲ್ಲುಮುಳ್ಳುಗಳ ದಾಳಿಗೆ ಸಿಕ್ಕಿ ಹೊಯ್ದಾಡುವುದು.ಕಟ್ಟಿದ ಕನಸು ಬೀಳುವುದೋ?ಎಂದೆನಿಸುವುದು ಇದು ಮಾನವನ ಅಂತಃಕರಣದ ಆತಂಕ ಎಂದರೆ ತಪ್ಪಿಲ್ಲ.ಆದರೆ ಕಲ್ಲುಮುಳ್ಳಿನ ಹಾದಿಯ ನಂತರ,ಮಣ್ಣಿನ ರಸ್ತೆ ಬರುವುದು,ಅದಾದ ನಂತರ ಡಾಂಬರು ರಸ್ತೆ  ಕೊನೆಗೆ ಕಾಂಕ್ರೀಟ್ ರಸ್ತೆಯೂ ಬರುವುದು.ಕಾಂಕ್ರೀಟ್ ರಸ್ತೆ ಬಂತೆಂದರೆ ಸಿದ್ದಪಡಿಸಿದ ಅಡುಗೆ ಸವಿಯಲು ಸಿದ್ದ ಎಂದು ಭಾವಿಸಬಹುದು.ನಂತರ ಅದನ್ನು ಸೇವಿಸಲು ಯಾವುದೇ ಅಡ್ಡಿ ಆತಂಕಗಳಿಲ್ಲ.ಅಂದರೆ ನಮ್ಮ ಜೀವನದ ಸಾಧನೆಯೊಂದಿಗಿನ ಪಯಣ ,ಧ್ರಢ ವಿಶ್ವಾಸ,ಛಲ,ನಂಬಿಕೆಯೊಂದಿಗೆ ಸಾಗಿ ಯಶಸ್ಸಿನ ಗುರಿ ತಲುಪಿತು ಎಂದು ತಿಳಿಯಬಹುದು.

 

ನಮ್ಮ ಸುತ್ತಮುತ್ತಲು ನಾನಾ ಬಗೆಯ ಜೀವನ ಶೈಲಿಯ ಜನರಿದ್ದಾರೆ.ಒಬ್ಬೊಬ್ಬರದು ಒಂದೊಂದು ಕಥೆ,ವ್ಯಥೆ.ಅವರಲ್ಲಿ ಕುಂಟರು,ಕಿವುಡರು,ಮೂಗರು,ಅನಾಥರು,ಭಿಕ್ಷುಕರು,ಗಂಜಿ ಕಾಣದವರು,ರಸ್ತೆಯಲ್ಲೇ ಓಡಾಡದವರು,ವಿಧವೆಯರು,ಸಾಲ ಮಾಡಿದವರು ಹೀಗೆ ನೋವು ನಲಿವುಗಳ ಜನತೆಯ ಪಟ್ಟಿ ಬೆಳೆಯುತ್ತದೆ.ಇಂತಹ ಸಮಾಜದ ನಡುವೆ,ಘಾತುಕ ಶಕ್ತಿಗಳ ವಿರುದ್ದ ಹೋರಾಡಿ ನಮ್ಮತನವನ್ನು ನಾವು ಕಂಡುಕೊಳ್ಳಬೇಕಿದೆ.ಇಂದಿನ ಜನ ದಡ್ಡರಲ್ಲ.ಆದರೆ ಅವರಲ್ಲಿ ದುಡಿಯುವ ಛಲವಿಲ್ಲ.ಮನಸ್ಸಿದ್ದರೆ ಮಾರ್ಗ ಎಂಬ ಗಾದೆಯೂ ಉಂಟು.ನಮ್ಮಲ್ಲಿ ಕನಸು ಕಾಣುವವರಿಗೆ ಕೊರತೆಯಿಲ್ಲ,ಆಸೆಯೂ ಬಹಳಷ್ಟು.ಆದರೆ ಅದನ್ನು ಈಡೇರಿಸುವ ಕಲೆ ನಮ್ಮಲ್ಲಿ ಇನ್ನೂ ಬರಬೇಕಿದೆ.ಅದು ನಮ್ಮ ಅಂತಃಶಕ್ತಿಯಲ್ಲೇ ಇದೆ.

 

ನಮ್ಮ ಮನೋನಂದನದ ಕವಾಟ ತೆರೆದಾಗ ಅಲ್ಲಿ ಸಾಧಿಸುವ ನೂರಾರು ಹಾದಿಗಳು ಗೋಚರವಾಗುತ್ತದೆ.ದುಡಿಮೆ,ಹಣ ಇವುಗಳ ಜೊತೆ ಜೀವನ ಸಾಗುತ್ತದೆ.ಕಣ್ಣೀರಿನಲ್ಲೇ ಒದ್ದೆಯಾದ ದೇಹ, ಎಳನೀರ ಸ್ನಾನಕ್ಕೆ ಸಿದ್ದವಾಗುತ್ತದೆ.ಅದಕ್ಕೆ ಪರಿಶ್ರಮ ಅತ್ಯಗತ್ಯ.ನಾವು ಬೆಳೆದಂತೆ ಇನ್ನೊಬ್ಬರನ್ನು ಬೆಳೆಸಬೇಕು.ಆಗ ನಮ್ಮ ತಿಳುವಳಿಕೆಯ ಮಟ್ಟ ಏರುತ್ತಾ ಹೋಗುತ್ತದೆ.ಮಾನವನ ಜೀವನದ ವಿವಿಧ ಸ್ಥರಗಳು ಕೇವಲ ಸಾವು ,ಬದುಕಿನ ಕೊಂಡಿಯಲ್ಲ.ಅದು ಮಾನವನ ಹಿರಿಮೆಗೆ ಇರುವ ಕಾಲಾವಕಾಶಗಳು.ಚಿಕ್ಕ ಕೂಲಿಯವನಿಂದ ಹಿಡಿದು ಹವಾನಿಯಂತ್ರಿತ ಕೊಠಡಿಯಲ್ಲಿ ಕೂತು ಕೆಲಸಮಾಡುವವನಿಗೂ ಇರುವ ಅಗತ್ಯತೆ ಸಾಧನೆ ಮಾತ್ರ.ಅದು ಕುಳಿತು ಉಣ್ಣಲು ನೆರವಾಗುವುದು.

 

ಜೀವನದಲ್ಲಿ ಕೆಲವು ಅಚ್ಚರಿಯ ಮೈಲುಗಲ್ಲುಗಳುಂಟು,ಅದು ನಮ್ಮ ಜೀವನದಲ್ಲೇ ಯಾಕಾಗಬಾರದು?ಕೆಲವು ನಿಯಮಿತ ತಪಸ್ಸನ್ನಾಚರಿಸಿದರೆ ಅದು ನಮ್ಮನ್ನು ಅತಿಥಿಯೆಂದು ಭಾವಿಸಿ,ಅತಿಥಿ ದೇವೋಭವ ಎಂದು ನಮ್ಮ ಬಳಿ ಬರುವುದು.ಸಾಧನೆಗಿಂತ ಮಿಗಿಲಾದುದು ಯಾವುದೂ ಇಲ್ಲ.ಹಣ ಕೇವಲ ಕೀರ್ತಿ ,ಹಿರಿಮೆ,ಶ್ರೀಮಂತಿಕೆಯನ್ನು ತರಬಹುದೇ ವಿನಾ ನಮ್ಮ ಮನಸ್ಸುನ್ನು ಅದು ಶ್ರೀಮಂತಗೊಳಿಸುವುದಿಲ್ಲ.ಅದು ಶ್ರೀಮಂತವಾಗಲು ಯಶಸ್ಸು,ಸಾಧನೆ ಮುಖ್ಯ.ಸಾಧಿಸಿದವನನ್ನು ಹಣ ಹುಡುಕಿಕೊಂಡು ಬರುತ್ತದೆ.ಅವನ ಕಷ್ಟ ನಿವಾರಣೆಯಾಗುವುದು.ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು."ಛಲವೊಂದಿದ್ದರೆ ಮಾರ್ಗ" ಸಾಧನೆಯ ಹಾದಿ ಬಹು ಸರಳ.ಯಾವ ವ್ಯಕ್ತಿಯೂ ಆಸೆಗಳಿಲ್ಲದೆ ಇರಲಾರ.ಹಾಗಂತ ಅದೆಲ್ಲಾ ಈಡೇರುವುದಿಲ್ಲ.ಸಿಕ್ಕ ಅವಕಾಶದಲ್ಲಿ ಯೋಜನೆಗಳನ್ನು ರೂಪಿಸಿ ಯಶಸ್ಸು ಎಂಬ ದೇವಾಲಯದ ಒಂದೊಂದೇ ಮೆಟ್ಟಿಲು ಏರಿದರೆ ಸಾಧನೆಯೆಂಬ ದೇವರಿಗೆ ಕೈಮುಗಿಯಲು ಸಾಧ್ಯ.

 

ಛಲದ ಹಾದಿ,ಸಾಧನೆಯತ್ತ ಪಯಣ ಹಠವಾದಿ ಮಾನವನ ಜೀವಿತದ ಸಾರ್ಥಕ ಕ್ಷಣ.ಇದು ನಮಗೂ,ನಿಮಗೂ, ಎಲ್ಲರಲ್ಲೂ ಸಾಧ್ಯ.ಮಾಡುವ ಮನಸ್ಸು,ಛಲ,ಧ್ರಡ ಸಂಕಲ್ಪ ನಮ್ಮನ್ನು ಆಕಾಶದ ನಕ್ಷತ್ರವಾಗಿಸಬಲ್ಲದು.ಯುಗಯುಗಗಳಲ್ಲಿ ನಮ್ಮ ಹೆಸರು ಮಿನುಗಬಲ್ಲದು.ನಮ್ಮಲ್ಲಿನ ಗಾಢನಿದ್ರೆಯಲ್ಲಿರುವ ನಮ್ಮ ಛಲ,ಸಾಧನೆಯ ಮನಸ್ಸುನ್ನು ಬಡಿದೆಬ್ಬಿಸಿದರೆ ಅದು ಮಾಡುವ ಕಾರ್ಯ ಸ್ವತಃ ನಿಮಗೇ ಆಶ್ಚರ್ಯವಾಗುವುದು.ನೂರಾರು ಜನರ ಬಾಯಲ್ಲಿ ನೀವು ನಲಿದಾಡಬಹುದು.ಹಿಂದೆ ಟೀಕಿಸಿದ ಜನ ಈಗ ನಿಮ್ಮ ಬಳಿ ಬರಬಹುದು,ನಿಮ್ಮ ಸಹಾಯ ಕೇಳಬಹುದು,ನಿಮ್ಮನ್ನೇ ಅವಲಂಬಿಸಬಹುದು.ಇದೆಲ್ಲಾ ಸಾಧ್ಯ.ಹೌದು!!,ಅದು ನಿಮ್ಮಿಂದ ,ನಿಮಗಾಗಿ,ನಿಮಗೋಸ್ಕರ ನಿಮ್ಮಲ್ಲೇ ಇರುವ ಛಲ,ನಂಬಿಕೆ,ಆತ್ಮವಿಶ್ವಾಸ,ಸಾಧನೆಯತ್ತ ನಿಮ್ಮ ತುಡಿತದಿಂದ,ನಿಮಗೆ ಗೊತ್ತಾಗದಂತೆ ನೀವು ಯಶಸ್ಸಿನ ಶಿಖರ ಏರಬಹುದು.ಅದು ನಿಮ್ಮ ಕೈಯಲ್ಲೇ ಇದೆ."ಏಳಿ,ಎದ್ದೇಳಿ,ಗುರಿ ಮುಟ್ಟುವವರೆಗೂ ನಿಲ್ಲದಿರಿ" ಎಂಬ ಸ್ವಾಮಿ ವಿವೇಕಾನಂದರ ವಿದ್ಯುತ್ ವಾಣಿಯನ್ನು ನಾವು ಅನುಸರಿಸಬೇಕು.ನಮ್ಮ ಛಲವೇ ನಮ್ಮ ಯಶಸ್ಸಿನ ದಾರಿದೀಪವಾಗಬೇಕು.

 

- ನಾಗಭೂಷಣ ಗುಮಗೋಡು.

ಮಂಗಳವಾರ, ಡಿಸೆಂಬರ್ 11, 2012

ಮುನ್ನುಡಿ


ತುಸು ನಗುವು ಅವಳ ತುಟಿಗಳಲಿ
ನನ್ನ ಮಾತು ಕೇಳಿಸಿದಾಗ
ತುಂಬಿತ್ತು ಕಣ್ಣಹನಿ ಕೆಂಪೇರಿದ ಕಣ್ಣಲ್ಲಿ
ನನ್ನ ಮನ ನೊಂದು ಬೆಂದಾಗ.



ಜೀವಕ್ಕೆ ಜೊತೆಯಾದ ನಿನ್ನ ಒಲವು..
ಕಷ್ಟ ಬಂದರೂ ಮೆಟ್ಟಿನಿಲ್ಲುವ ನಿನ್ನ ನಿಲುವು.
ಪ್ರಿಯಕರನ ಕೊರಳ ಬಂಧಿಸಿದಾಗ
ಮಧುರ ಮಾತಿನ ಬಾಡೂಟ.



ತೋರಗೊಡೆ ನೀ ನಿನ್ನ ಪ್ರೇಮವ,
ತೋರಿದೆ ನೀ ನನ್ನ ಹೃದಯದಿ..
ಕಡಲ ಅಲೆಗಳಂತೆ ರಭಸದಲಿ..
ಈ ನಿನ್ನ ಪ್ರೀತಿ ಪ್ರಶಾಂತ ಕಾಲುವೆಯಂತೆ.



ನಿನ್ನ ಮುದ್ದಿನ ಮಾತೊಂದು ಸಾಕು
ಅದೇ ನನ್ನ ಸುಟ್ಟ ಭಾವನೆಗಳಿಗೆ ಮದ್ದು..
ನಿನ್ನ ನಗು ನನ್ನೆದೆಯ ದಾರಿದೀಪ..
ನೀ ಕೊಟ್ಟ ಸಿಹಿಮುತ್ತು ನನಗದೇ ಆಶಾಕಿರಣ.



ನೀ ಬರೆದೆ ಪ್ರೇಮಕಾವ್ಯವನು..
ತಣ್ಣನೆ ಹಾಕಿದೆ ನಾ ಕೆಳಗೊಂದು  ಸಹಿ..
ಚಂದನದ ಗೊಂಬೆಗೆ ಕುಂಕುಮದ ತಿಲಕ..
ಎರಡು ಹೃದಯಗಳ ಬೆಸುಗೆಗೆ ನೀ ಬರೆದೆ ಮುನ್ನುಡಿ.




- ನಾಗಭೂಷಣ ಗುಮಗೋಡು.